ಗದಗ : ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ, ಹದಲಿ ಗ್ರಾ.ಪಂ.ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಎರಡು ಬಾರಿ ಹಾಜರಾತಿ ಕಡ್ಡಾಯ: ಸಂತೋಷಕುಮಾರ ಪಾಟೀಲ್ ಹೇಳಿಕೆ
ನರಗುಂದ: ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಎನ್ಎಂಎಂಎಸ್ ಹಾಜರಾತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಕೂಲಿಕಾರರು ಎರಡು ಬಾರಿ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ತಾ.ಪಂ. ಗ್ರಾಮೀಣ ಉದ್ಯೋಗ ಖಾತ್ರಿಯ ಸಾಹಾಯಕ ನಿರ್ದೇಶಕರಾದ ಸಂತೋಷಕುಮಾರ ಪಾಟೀಲ ಹೇಳಿದರು.
ತಾಲೂಕಿನ ಸುರಕೋಡ, ಹದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
2025-26 ನೇ ಸಾಲಿನ ಕ್ರೀಯಾಯೋಜನೆ ಏಪ್ರಿಲ್ 1 ರಿಂದ ಆರಂಭವಾಗಿದ್ದು, ಪ್ರತಿ ದಿನಕ್ಕೆ ಒಬ್ಬರಿಗೆ 370 ರೂಪಾಯಿ ಕೂಲಿ ಮೊತ್ತ ದೊರೆಯಲಿದೆ. ತಮಗೆ ಕೊಟ್ಟಿರುವ ಅಳತೆಯಂತೆ ಕೆಲಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೆಲಸ ಸಿಗಲಿದೆ. ಆದ್ದರಿಂದ ಎಲ್ಲರೂ ಸರಿಯಾಗಿ ಕೆಲಸ ನಿರ್ವಹಿಸಿ 370 ರೂಪಾಯಿ ಕೂಲಿಮೊತ್ತ ಪಡೆಯಬೇಕು ಎಂದು ತಿಳಿಸಿದರು.
ಕೂಲಿಕಾರರು 1052 ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿ ತಮ್ಮ ಖಾತೆಗೆ ನೇರವಾಗಿ ಪಾವತಿಯಾಗಲಿದೆ.ಕೂಲಿಕಾರರು ದಿನಕ್ಕೆ ಎರಡು ಬಾರಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ಒಂದು ಪೋಟೋದಲ್ಲಿದ್ದು ಎರಡನೇ ಪೋಟೋದಲ್ಲಿ ಗೈರಾಗುವ ಕೂಲಿಕಾರ ಖಾತೆಗೆ ಹಣ ಪಾವತಿಯಾಗುವುದಿಲ್ಲ. ಕೂಲಿಕಾರರು ಎರಡು ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು.
ನರೇಗಾ ಯೋಜನೆಯಡಿ ಕೂಲಿಕಾರರು ಬೇಸಿಗೆ ಅವಧಿಯಲ್ಲಿ ಕೂಲಿ ಕೆಲಸ ಪಡೆದುಕೊಂಡು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಯೋಜನೆಯಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ ಬೀಜ ಗೊಬ್ಬರ ಖರೀದಿಗೆ ಸಹಾಯಕವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಶೃತಿ ಸಂಗನಾಳ, ತಾಂತ್ರಿಕ ಸಂಯೋಜಕರ ಹನುಮಂತ ಡಂಬಳ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ತಾಂತ್ರಿಕ ಸಾಹಾಯಕ ಸುಭಾಸ್ ಮಲ್ಲನಗೌಡ್ರ, ಬಿಎಫ್.ಟಿ ಮಂಜುನಾಥ ನಾಡಗೌಡ್ರ, ಪಂಚಾಯತ್ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದಾರು.
ಸುರಕೋಡ : ಹದಲಿ ಗ್ರಾ.ಪಂ ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂತೋಷಕುಮಾರ್ ಪಾಟೀಲ
