
ಸರ್ಕಾರಿ ವಸತಿ ನಿಲಯಗಳು ಪ್ರಾರ್ಥನಾ ಕೇಂದ್ರಗಳಿದಂತೆ, ಶೃದ್ಧೆಯಿಂದ ಕಲಿತು ಸರ್ಕಾರಿ ನೌಕರರಾಗಿ-ಇಒ ಚಂದ್ರಶೇಖರ್ ಕಂದಕೂರು ಅಭಿಮತ*
*ವಸತಿ ನಿಲಯದ ಕಿರಿಯ ವಿದ್ಯಾರ್ಥಿಗಳಿಗೆ ಓದು, ಗುಣ, ಚಾರಿತ್ರ್ಯದಲ್ಲಿ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗುವಂತೆ ಸೂಚನೆ*
*ತಡರಾತ್ರಿ ಗಜೇಂದ್ರಗಡ ನಗರದ ಬಿಸಿಎಂ ಹಾಸ್ಟೇಲ್ ಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲಿಸಿದ ಇಒ ಚಂದ್ರಶೇಖರ ಕಂದಕೂರು
*ಗಜೇಂದ್ರಗಡ: ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರ ಅವರು ಸೋಮವಾರ ತಡರಾತ್ರಿ ನಗರದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಿಸಿಎಂ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿದರು. ಬಸವರಾಜ ಬಡಿಗೇರ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಪಂ ಗಜೇಂದ್ರಗಡ ಅವರ ಜೊತೆಗೂಡಿ ವಸತಿ ನಿಲಯಗಳಿಗೆ ಭೇಟಿ ನೀಡಿದ ಇಒ ಅವರು, ವಸತಿ ನಿಲಯಗಳ ಸ್ವಚ್ಛತೆ, ಊಟದ ವ್ಯವಸ್ಥೆ, ವಸತಿ ನಿಲಯಗಳಲ್ಲಿ ಮೂಲಭೂತ ಅವಶ್ಯಕತೆಗಳ ಪೂರೈಕೆಗಳ ಬಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅನುಕೂಲತೆಗೆ ರಾಜ್ಯ ಸರ್ಕಾರ ಸಕಲ ಸೌಕರ್ಯಗಳನ್ನು ಒದಗಿಸಿದೆ. ಸರ್ಕಾರದ ಈ ಅನುಕೂಲತೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರುವ ವಿದ್ಯಾರ್ಥಿಗಳಿಗೂ ಒದಗಿಸಿಕೊಡುವ ಕೆಲಸವನ್ನು ವಸತಿ ನಿಲಯದ ವಿದ್ಯಾರ್ಥಿಗಳು ಮಾಡಬೇಕು. ವಿದ್ಯಾರ್ಥಿಗಳಾಗಿದ್ದ ವೇಳೆ ನಮಗೆಲ್ಲ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ಇಂದು ನಿಮಗೆ ಸಕಲ ರೀತಿಯ ಸೌಲಭ್ಯಗಳಿರುವಾಗ ಓದಿನಲ್ಲಿ ಹಿಂದೆ ಬೀಳದೆ ವಸತಿ ನಿಲಯಗಳನ್ನು ಪ್ರಾರ್ಥನಾ ಕೇಂದ್ರಗಳೆಂದು ಭಾವಿಸಿ ಭಕ್ತಿಯಿಂದ ಓದಿನಲ್ಲಿ ತೊಡಗಿಕೊಂಡು ಸರ್ಕಾರದ ಉನ್ನತ ಹುದ್ದೆ ಪಡೆದುಕೊಳ್ಳಿ ಅಂತ ಇಒ ಕಂದಕೂರು ಅವರು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದರು.

ಸ್ವತಃ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವವುಳ್ಳ ಇಒ ಅವರು ಮೆಟ್ರಿಕ್ ಪೂರ್ವ ವಸತಿ ನಿಲಯದ ಮಕ್ಕಳಿಗೆ ಯಾವುದೇ ವಿಷಯ ಕಠಿಣವೆನಿಸಿದರೂ ದೂರವಾಣಿ ಕರೆ ಮಾಡಿದರೆ ಆ ವಿಷಯದ ಕುರಿತು ಪಾಠ ಮಾಡುವುದಾಗಿ ವಸತಿ ನಿಲಯದ ಮಕ್ಕಳಿಗೆ ಓದಿನಲ್ಲಿ ತೊಡಗುವಂತೆ ಪ್ರೇರೆಪಿಸಿದರು.


. ಚಿಕನ್ ಊಟ ಕೊಡುವಂತೆ ಇಒ ಬಳಿ ಮನವಿ ಮಾಡಿಕೊಂಡ ವಿದ್ಯಾರ್ಥಿಗಳು. ಇದಕ್ಕೆ ಉತ್ತರಿಸಿದ ಇಒ ಅವರು, ಸದ್ಯ ತಿಂಗಳಿಗೆ ಒಂದು ಸಲ ಚಿಕನ್ ಊಟ ಕೊಡಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹೇಳಿದ್ರೆ ಕೊಡುವುದಾಗಿ ಇಒ ತಿಳಿಸಿದರು. ಅಲ್ಲದೆ ಚಿಕನ್ ಊಟದ ಮೇಲಿರುವ ಪ್ರೀತಿ ಓದಿನಲ್ಲೂ ತೋರಿಸಿ ಅಂತ ಹಾಸ್ಯ ಚಟಾಕಿ ಸಿಡಿಸಿದರು.*
