
ಅಫಜಲಪುರ,
ಆ.30ಸಕ್ಕರೆ ಕಾರ್ಖಾನೆಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ – ರೈತರಿಗೆ ವಂಚನೆ ಆರೋಪ
ಅಫಜಲಪುರ ತಾಲೂಕಿನ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಕಬ್ಬಿನ ಇಳುವರಿಯಲ್ಲಿ ತಪ್ಪು ಮಾಹಿತಿ ನೀಡಿ ಸರ್ಕಾರಕ್ಕೂ ಮೋಸ ಮಾಡುತ್ತಿದ್ದು, ರೈತರಿಗೂ ವಂಚನೆ ನಡೆಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಶ್ರೀಮಂತ ಬಿರಾದರ್ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಎನ್ಎಸ್ಎಲ್, ಚಿಂಚೋಳಿ ತಾಲೂಕಿನ ಸಿದ್ದಸಿರಿ ಹಾಗೂ ಚಿಣಮೇರಿ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗಳು 10.15 ಇಳುವರಿ ತೋರಿಸಿ ಪ್ರತಿ ಟನ್ಗೆ ₹3515 ದರ ನಿಗದಿ ಮಾಡಿವೆ. ಆದರೆ ಹವಳಗಾದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಕೇವಲ 9.60 ಇಳುವರಿ ತೋರಿಸಿ, ರೈತರಿಗೆ ಪ್ರತಿ ಟನ್ಗೆ ₹200ರಷ್ಟು ನಷ್ಟ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.“ಮಣ್ಣು, ನೀರು, ಹವಾಮಾನ ಒಂದೇ ರೀತಿಯದ್ದಾಗಿದ್ದರೂ, ಉಳಿದ ಕಾರ್ಖಾನೆಗಳಲ್ಲಿ ಹೆಚ್ಚು ಇಳುವರಿ ಬರುತ್ತಿದೆ. ಆದರೆ ರೇಣುಕಾ ಕಾರ್ಖಾನೆಯಲ್ಲಿ ಮಾತ್ರ ಕಡಿಮೆ ತೋರಿಸುವುದು ಸಂಸಾಸ್ಪದವಾಗಿದೆ” ಎಂದು ಪ್ರಶ್ನಿಸಿದರು.ಕಾರ್ಖಾನೆ ಆರಂಭವಾದ ಕಾಲದಿಂದಲೇ ರೈತರನ್ನು ವಂಚಿಸುತ್ತಿರುವುದರಿಂದ ಕರ್ನಾಟಕ ಪ್ರಾಂತ ರೈತ ಸಂಘ ನಿರಂತರ ಹೋರಾಟ ನಡೆಸುತ್ತಿದ್ದು, ಸರ್ಕಾರ ಇನ್ನೂ ಗಮನ ಹರಿಸಿಲ್ಲ.
ಆದ್ದರಿಂದ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ವರ್ಷದ ಕಬ್ಬು ಕಟಾವು ಮುಂಚೆಯೇ ನಿಖರವಾದ ಬೆಲೆ ನಿಗದಿ ಮಾಡಿ ಕಾರ್ಖಾನೆ ಆರಂಭಿಸಲು ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.“ರೈತರ ಹಿತ ಕಾಯುವ ಬದಲು, ಕಾರ್ಖಾನೆ ಮೋಸಮಯ ಆಟವಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

