ಜಲಾನಯನ ಪ್ರದೇಶ: ನೀರು ಮತ್ತು ಮಣ್ಣಿನ ಸಂರಕ್ಷಣೆಯ ಮೂಲಕ ಕೃಷಿ ಮತ್ತು ರೈತರ ಸಮೃದ್ಧಿಯ ವಿಕಸಿತ ಭಾರತದ ಕನಸನ್ನು ನನಸಾಗಿಸುವುದು -ಶ್ರೀ ಶಿವರಾಜ್ ಸಿಂಗ್ .

ಜಲಾನಯನ ಪ್ರದೇಶ: ನೀರು ಮತ್ತು ಮಣ್ಣಿನ ಸಂರಕ್ಷಣೆಯ ಮೂಲಕ ಕೃಷಿ ಮತ್ತು ರೈತರ ಸಮೃದ್ಧಿಯ ವಿಕಸಿತ ಭಾರತದ ಕನಸನ್ನು ನನಸಾಗಿಸುವುದು -ಶ್ರೀ ಶಿವರಾಜ್ ಸಿಂಗ್

ಚೌಹಾಣ್ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರುನೀರು ನಮ್ಮ ಜೀವನ ಮತ್ತು ಮಣ್ಣು ನಮ್ಮ ಅಸ್ತಿತ್ವ, ನಮ್ಮ ಅಡಿಪಾಯ. ನೀರು ಮತ್ತು ಮಣ್ಣು ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇಂದು, ಪರಿಸರ ಬಿಕ್ಕಟ್ಟು ತೀವ್ರವಾಗುತ್ತಿದ್ದಂತೆ – ಬಾವಿಗಳು ಬತ್ತುತ್ತಿವೆ, ನದಿಗಳು ಒಣಗುತ್ತಿವೆ ಮತ್ತು ಅಂತರ್ಜಲ ಕ್ಷೀಣಿಸುತ್ತಿದೆ – ಭವಿಷ್ಯದ ಪೀಳಿಗೆಗೆ ನೀರು ಮತ್ತು ಮಣ್ಣನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಹೊಲಗಳು ಹಸಿರಾಗಿದ್ದರೆ ಮತ್ತು ನಮ್ಮ ರೈತರು ಸಮೃದ್ಧವಾಗಿದ್ದರೆ ಮಾತ್ರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘2047ರ ವೇಳೆಗೆ ವಿಕಸಿತ ಭಾರತ’ ಎಂಬ ಕನಸು ನನಸಾಗುತ್ತದೆ, ಏಕೆಂದರೆ ಈ ಕನಸಿನ ಹಾದಿಯು ನಮ್ಮ ಹಳ್ಳಿಗಳು, ಫಲವತ್ತಾದ ಮಣ್ಣು ಮತ್ತು ಸಮೃದ್ಧ ಬೆಳೆಗಳ ಮೂಲಕ ಸಾಗುತ್ತದೆ.ಇಂದು, ಅನೇಕ ಸ್ಥಳಗಳಲ್ಲಿ ಅಂತರ್ಜಲ ಮಟ್ಟವು 1,000 ರಿಂದ 1,500 ಅಡಿಗಳಿಗೆ ಕುಸಿದಿದೆ. ನಮ್ಮ ಫಲವತ್ತಾದ ಮಣ್ಣು ನಿರಂತರವಾಗಿ ಸವೆಯುತ್ತಿದ್ದರೆ ಮತ್ತು ಭೂಮಿ ಬಂಜರಾಗುತ್ತಿದ್ದರೆ, ಮುಂದಿನ ಪೀಳಿಗೆಯ ಭವಿಷ್ಯ ಏನಾಗಬಹುದು? ಅಂತಹ ದೂರದೃಷ್ಟಿಯ ಚಿಂತನೆ ಮತ್ತು ಭವಿಷ್ಯದ ಬಗ್ಗೆ ಕಾಳಜಿಯೊಂದಿಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಒಂದು ಪ್ರಮುಖ ಉಪಕ್ರಮವನ್ನು ತೆಗೆದುಕೊಂಡಿದೆ. ಪ್ರಧಾನಮಂತ್ರಿ ಅವರು ಯಾವಾಗಲೂ ಇವತ್ತಿಗೆ ಮಾತ್ರವಲ್ಲ, ಮುಂದಿನ 50 ರಿಂದ 100 ವರ್ಷಗಳವರೆಗಿನ ದೂರದೃಷ್ಟಿಯೊಂದಿಗೆ ಕೆಲಸ ಮಾಡುತ್ತಾರೆ.

ಅವರ ನೇತೃತ್ವದಲ್ಲಿ, ಭಾರತ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯು ದೇಶಾದ್ಯಂತ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಡಬ್ಯ್ಯೂ.ಡಿ.ಸಿ-ಪಿ.ಎಂ.ಕೆ.ಎಸ್.ವೈ)’ಯ ‘ಜಲಾನಯನ ಅಭಿವೃದ್ಧಿ ಘಟಕ’ವನ್ನು ಜಾರಿಗೊಳಿಸುತ್ತಿದೆ. ಆದರೆ ಕೇವಲ ಸರ್ಕಾರವೊಂದೇ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸಮಾಜವೂ ಈ ಮಹಾನ್ ಪ್ರಯತ್ನಕ್ಕೆ ಕೈಜೋಡಿಸಬೇಕು. ಇದು ಭೂಮಿಯನ್ನು ಉಳಿಸುವ ಒಂದು ಉಪಕ್ರಮ. ನೀರು, ಮಣ್ಣು ಮತ್ತು ಭೂಮಿಯನ್ನು ಉಳಿಸಿದರೆ, ಭವಿಷ್ಯವೂ ಉಳಿಯುತ್ತದೆ. ವಿಶೇಷವಾಗಿ ಒಂದು ಕಾಲದಲ್ಲಿ ಪ್ರತಿ ಹನಿ ನೀರಿಗೂ ಹೋರಾಟ ನಡೆಸುತ್ತಿದ್ದ ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಸಮೃದ್ಧಿಯನ್ನು ತರಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.ಈ ಜಲಾನಯನ ಯೋಜನೆ ನಿಖರವಾಗಿ ಏನು ಎಂದು ಅನೇಕ ಜನರು ನನ್ನನ್ನು ಕೇಳುತ್ತಾರೆ. ನಾನು ಅವರಿಗೆ ಸರಳ ಭಾಷೆಯಲ್ಲಿ ಹೇಳುತ್ತೇನೆ, ಇದು ಕೇವಲ ಸರ್ಕಾರಿ ಯೋಜನೆಯಲ್ಲ, ಜನರಿಂದ ಮತ್ತು ಜನರಿಗಾಗಿ ನಡೆಸಲ್ಪಡುವ ಜನಾಂದೋಲನ. ಇದರ ಮೂಲ ಮಂತ್ರ: “ಹೊಲದ ನೀರು ಹೊಲದಲ್ಲಿಯೇ ಉಳಿಯುತ್ತದೆ, ಹಳ್ಳಿಯ ನೀರು ಹಳ್ಳಿಯಲ್ಲಿಯೇ ಉಳಿಯುತ್ತದೆ.” ಇದರ ಅಡಿಯಲ್ಲಿ, ನಾವು ಸಾಮೂಹಿಕವಾಗಿ ಹೊಲದ ಬದುಗಳನ್ನು ಬಲಪಡಿಸುತ್ತೇವೆ, ಹೊಲಗಳಲ್ಲಿ ಸಣ್ಣ ಹೊಂಡಗಳನ್ನು ನಿರ್ಮಿಸುತ್ತೇವೆ ಮತ್ತು ಸಣ್ಣ ಹೊಳೆಗಳಿಗೆ ಅಡ್ಡಲಾಗಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುತ್ತೇವೆ. ಇದು ಮಳೆನೀರು ನಿಷ್ಪ್ರಯೋಜಕವಾಗಿ ಹರಿದುಹೋಗದಂತೆ ನೋಡಿಕೊಳ್ಳುತ್ತದೆ, ಬದಲಿಗೆ ನೆಲದೊಳಗೆ ಹರಿಯುತ್ತದೆ, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಲ್ಲಿ ತೇವಾಂಶವನ್ನು ದೀರ್ಘಕಾಲದವರೆಗೆ ಉಳಿಸುತ್ತದೆ.ಈ ಯೋಜನೆಯ ದೊಡ್ಡ ಶಕ್ತಿ ಸಾರ್ವಜನಿಕರ ಭಾಗವಹಿಸುವಿಕೆ. ಕೆರೆಗಳನ್ನು ಎಲ್ಲಿ ತೋಡಬೇಕು, ಎಲ್ಲಿ ಕಟ್ಟೆಗಳನ್ನು ನಿರ್ಮಿಸಬೇಕು ಮತ್ತು ಎಲ್ಲಿ ಮರಗಳನ್ನು ನೆಡಬೇಕು ಎಂಬುದನ್ನು ಗ್ರಾಮಸ್ಥರೇ ನಿರ್ಧರಿಸುತ್ತಾರೆ. ಭೂರಹಿತ ಕುಟುಂಬಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ತಮ್ಮ ಆದಾಯವನ್ನು ಹೆಚ್ಚಿಸಲು ಕೋಳಿ ಸಾಕಣೆ ಮತ್ತು ಜೇನು ಸಾಕಣೆಯಂತಹ ಚಟುವಟಿಕೆಗಳಿಗೆ ಜೋಡಿಸಲಾಗುತ್ತಿದೆ. ಈ ಯೋಜನೆಯು ಬಹಳ ಉತ್ತೇಜನಕಾರಿ ಫಲಿತಾಂಶಗಳನ್ನು ತೋರಿಸಿದೆ. ರೈತರ ಆದಾಯವು ಶೇ.8 ರಿಂದ ಶೇ.70 ರವರೆಗೆ ಏರಿದೆ. 2015 ರಿಂದ ಸರ್ಕಾರವು ₹20,000 ಕೋಟಿಗಿಂತ ಹೆಚ್ಚು ಖರ್ಚು ಮಾಡುವ ಮೂಲಕ ದೇಶಾದ್ಯಂತ 6,382 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಸುಮಾರು 3 ಕೋಟಿ ಹೆಕ್ಟೇರ್ ಭೂಮಿಯನ್ನು ಫಲವತ್ತಾಗಿಸಿದೆ.ಒಂದು ಕಾಲದಲ್ಲಿ ಬರಗಾಲವು ಪ್ರಮುಖ ಸಮಸ್ಯೆಯಾಗಿದ್ದ ಮಧ್ಯಪ್ರದೇಶದ ಝಬುವಾದಲ್ಲಿ – ಇಂದು ಬುಡಕಟ್ಟು ಗ್ರಾಮಗಳು ಹೇರಳವಾದ ನೀರು ಹೊಂದಿವೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಾಗಿದೆ. ಯೋಜನೆಯಡಿಯಲ್ಲಿ, 22 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟವು ಒಂದು ಮೀಟರ್ ಹೆಚ್ಚಾಗಿದೆ. ಕೃಷಿ ಪದ್ಧತಿಗಳು ಬದಲಾಗಿವೆ. ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿದ ನಂತರ, ರೈತರು ಈಗ ಮೆಕ್ಕೆಜೋಳದ ಜೊತೆಗೆ ಕಡಲೆ ಬೆಳೆಯುತ್ತಿದ್ದಾರೆ, ತಮ್ಮ ಆದಾಯ ₹50,000-₹60,000 ಹೆಚ್ಚಾಗಿದೆ ಎಂದು ರೈತರು ಹೇಳುತ್ತಾರೆ. ಅದೇ ರೀತಿ, ಝಬುವಾದ ಪರ್ವಾಲಿಯಾ ಪಂಚಾಯತ್ ನಲ್ಲಿ, 12 ಹೊಲಗಳಲ್ಲಿ ನಿರ್ಮಿಸಲಾದ ಕೃಷಿ ಹೊಂಡಗಳು ರೈತರ ಆದಾಯವನ್ನು ಹೆಕ್ಟೇರ್ ಗೆ ₹1-1.5 ಲಕ್ಷದಷ್ಟು ಹೆಚ್ಚಿಸಿವೆ.ಈ ಯೋಜನೆಯಡಿಯಲ್ಲಿ, ಚೆಕ್ ಡ್ಯಾಮ್ ಗಳು, ಪರ್ಕೋಲೇಷನ್ ಟ್ಯಾಂಕ್ಗಳು ಮತ್ತು ಕೃಷಿ ಹೊಂಡಗಳು ಸೇರಿದಂತೆ 9 ಲಕ್ಷಕ್ಕೂ ಹೆಚ್ಚು ಜಲಾನಯನ ರಚನೆಗಳನ್ನು ನಿರ್ಮಿಸಲಾಗಿದೆ. 5.6 ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದ್ದು, ಗ್ರಾಮೀಣ ಜೀವನೋಪಾಯವನ್ನು ಹೆಚ್ಚಿಸಲಾಗಿದೆ. ಜಲಾನಯನ ಯೋಜನೆಗಳು ಹಳ್ಳಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿವೆ. ಯೋಜನಾ ಪ್ರದೇಶಗಳಲ್ಲಿ, ಹೊಸ ನೀರಿನ ಮೂಲಗಳು 1.5 ಲಕ್ಷ ಹೆಕ್ಟೇರ್ ಗಳಿಗಿಂತ ಹೆಚ್ಚು ಪ್ರದೇಶವನ್ನು ಆವರಿಸಿವೆ – ಇದು ಶೇ.16 ರಷ್ಟು ಹೆಚ್ಚಳವಾಗಿದೆ. ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ತೋಟಗಾರಿಕೆ ಮತ್ತು ಮರ ಕೃಷಿಯತ್ತ ಮುಖ ಮಾಡಿದ್ದಾರೆ, ಇದರಿಂದಾಗಿ ತೋಟಗಾರಿಕೆ ಪ್ರದೇಶದಲ್ಲಿ ಶೇ.12 ರಷ್ಟು ಹೆಚ್ಚಳವಾಗಿ 1.9 ಲಕ್ಷ ಹೆಕ್ಟೇರ್ ಗಳಿಗೆ ತಲುಪಿದೆ.ರಾಜಸ್ಥಾನದ ಬಾರ್ಮರ್ ನಂತಹ ಮರುಭೂಮಿ ಪ್ರದೇಶಗಳಲ್ಲಿ – ನೀರಿನ ಕೊರತೆಯಿಂದಾಗಿ ರೈತರು ವಲಸೆ ಹೋಗಬೇಕಾಗುತ್ತಿತ್ತು – ದಾಳಿಂಬೆ ಕೃಷಿಯು ಹಸಿರನ್ನು ಮರಳಿ ತಂದಿದೆ.

120 ಕ್ಕೂ ಹೆಚ್ಚು ರೈತರಿಗೆ ಮರಳು ಮಣ್ಣು ಮತ್ತು ಸೀಮಿತ ನೀರಿನಲ್ಲಿ ಬೆಳೆಯುವ ದಾಳಿಂಬೆ ಗಿಡಗಳನ್ನು ನೀಡಲಾಯಿತು. ದಾಳಿಂಬೆ ಕೃಷಿಯು ಆದಾಯವನ್ನು ಹೆಚ್ಚಿಸಿದ್ದಲ್ಲದೆ, ಬುಡಿವಾಡಾ ಗ್ರಾಮದ ಮಂಗಿಲಾಲ್ ಪರಂಗಿಯಂತಹ ರೈತರು ಹರಳು ಕೃಷಿಯಿಂದ ತೋಟಗಾರಿಕೆಗೆ ಬದಲಾಗಲು ಪ್ರೋತ್ಸಾಹಿಸಿತು. ಅದೇ ರೀತಿ, ತ್ರಿಪುರದಲ್ಲಿ, ದಾಶಿ ರಿಯಾಂಗ್ ಮತ್ತು ಬಿಮನ್ ರಿಯಾಂಗ್ ನಂತಹ ರೈತರು ಈ ಯೋಜನೆಯಡಿಯಲ್ಲಿ ಅನಾನಸ್ ಕೃಷಿಯ ಮೂಲಕ ಬಂಜರು ಭೂಮಿಯನ್ನು ಪುನರುಜ್ಜೀವನಗೊಳಿಸಿದ್ದಾರೆ, ಉತ್ತಮ ಆದಾಯವನ್ನು ಗಳಿಸಿದ್ದಾರೆ.ಈ ಆಂದೋಲನವನ್ನು ದೇಶಾದ್ಯಂತ ಹರಡಲು, ನಾವು ‘ಜಲಾನಯನ ಯಾತ್ರೆ’ಯನ್ನು ಸಹ ಪ್ರಾರಂಭಿಸಿದೆವು. ಈ ಯಾತ್ರೆಯ ಮೂಲಕ ನೀರು ಮತ್ತು ಮಣ್ಣಿನ ಸಂರಕ್ಷಣೆಯ ಕುರಿತು ಸಾಮೂಹಿಕ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.

ಭುವನ್ ಜಿಯೋಪೋರ್ಟಲ್ (ಸೃಷ್ಟಿ) ಮತ್ತು ದೃಷ್ಟಿ ಮೊಬೈಲ್ ಅಪ್ಲಿಕೇಶನ್ ನಂತಹ ಸಾಧನಗಳ ಮೂಲಕ ಪ್ರಗತಿಯ ನಿಖರವಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದೆ. ರೈತರ ಕಠಿಣ ಪರಿಶ್ರಮ ಮತ್ತು ಸರ್ಕಾರದ ಪ್ರಯತ್ನಗಳು ದೇಶಾದ್ಯಂತ ಸಾಗುವಳಿ ಪ್ರದೇಶದ ಹೆಚ್ಚಳಕ್ಕೆ ಕಾರಣವಾಗಿವೆ. ಉಪಗ್ರಹ ದತ್ತಾಂಶವು ಬೆಳೆ ಪ್ರದೇಶವು ಸುಮಾರು 10 ಲಕ್ಷ ಹೆಕ್ಟೇರ್ಗಳಷ್ಟು (ಶೇ.5 ಹೆಚ್ಚಳ) ಮತ್ತು ಜಲಾನಯನ ಪ್ರದೇಶಗಳು 1.5 ಲಕ್ಷ ಹೆಕ್ಟೇರ್ ಗಳಷ್ಟು (ಶೇ.16 ಹೆಚ್ಚಳ) ಹೆಚ್ಚಾಗಿದೆ ಎಂದು ತೋರಿಸುತ್ತದೆ. ಮುಖ್ಯವಾಗಿ, 8.4 ಲಕ್ಷ ಹೆಕ್ಟೇರ್ ಗಳಿಗಿಂತ ಹೆಚ್ಚು ಬಂಜರು ಭೂಮಿ ಮತ್ತೆ ಕೃಷಿಯೋಗ್ಯವಾಗಿದೆ.ಪ್ರಧಾನಮಂತ್ರಿ ಮೋದಿ ಅವರ ಸಮರ್ಥ ನಾಯಕತ್ವದ, ಈ ಅಮೃತ ಕಾಲದಲ್ಲಿ, ನಾವು ಭೂ ಸಂರಕ್ಷಣೆಯ ಯಶೋಗಾಥೆಯನ್ನು ಬರೆಯುತ್ತಿದ್ದೇವೆ. ಇವು ಕೇವಲ ಅಂಕಿಅಂಶಗಳಲ್ಲ, ರೈತರ ಕಠಿಣ ಪರಿಶ್ರಮ ಮತ್ತು ಅವರ ಉಜ್ವಲ ಭವಿಷ್ಯದ ಜೀವಂತ ಪುರಾವೆಗಳಾಗಿವೆ. ನೀರು ಮತ್ತು ಮಣ್ಣನ್ನು ಉಳಿಸುವ ಮೂಲಕ ಮಾತ್ರ ನಾವು ಮುಂಬರುವ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು. ನಾವೆಲ್ಲರೂ ಒಟ್ಟಾಗಿ ಈ ಸಂಕಲ್ಪವನ್ನು ಈಡೇರಿಸೋಣ, ರೈತರನ್ನು ಸಮೃದ್ಧಗೊಳಿಸೋಣ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸೋಣ.ಈ ಅಭಿಯಾನವು ಸರ್ಕಾರದ ಪ್ರಯತ್ನಗಳಿಂದ ಮಾತ್ರವಲ್ಲದೆ ಸಮಾಜದ ಭಾಗವಹಿಸುವಿಕೆಯಿಂದ ಯಶಸ್ವಿಯಾಗುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ನಂಬಿದ್ದಾರೆ.

ಜಲಾನಯನ ಯಾತ್ರೆ’ಯಂತಹ ಉಪಕ್ರಮಗಳೊಂದಿಗೆ, ಈ ಯೋಜನೆ ಈಗಾಗಲೇ ಜನಾಂದೋಲನವಾಗಿದೆ. ಇದು ಭಾರತದ ರೈತರ ಕಠಿಣ ಪರಿಶ್ರಮ ಮತ್ತು ಅವರ ಬದಲಾಗುತ್ತಿರುವ ಭವಿಷ್ಯದ ಕಥೆಯಾಗಿದೆ. ನೀರು ಮತ್ತು ಮಣ್ಣು ಸುರಕ್ಷಿತವಾಗಿದ್ದಾಗ ಮಾತ್ರ ಭಾರತ ಸುರಕ್ಷಿತವಾಗಿರುತ್ತದೆ. 2047ರ ವೇಳೆಗೆ, ಹಳ್ಳಿಗಳ ಭೂಮಿ ಸಮೃದ್ಧವಾದಾಗ ಮತ್ತು ರೈತರು ಅಭಿವೃದ್ಧಿ ಹೊಂದಿದಾಗ ಮಾತ್ರ ‘ವಿಕಸಿತ ಭಾರತ’ದ ಕನಸು ನನಸಾಗುತ್ತದೆ. ನೀರು ಮತ್ತು ಮಣ್ಣಿನ ಸಂರಕ್ಷಣೆಯ ಈ ಸಂಕಲ್ಪವನ್ನು ನಾವೆಲ್ಲರೂ ಒಟ್ಟಾಗಿ ಮುನ್ನಡೆಸೋಣ.

Leave a Reply

Your email address will not be published. Required fields are marked *